Thursday, October 23, 2014

Prof CNR Rao: Interview in Prajavani

ಸಿಎನ್‌ಆರ್‌ ರಾವ್ ವಿಜ್ಞಾನದ ಬೆಳಕಿನಲ್ಲಿ...







By Shivanand Kanavi




















 

















  • ವಿಜ್ಞಾನ ಆಯ್ಕೆ ಮಾಡಿಕೊಳ್ಳಲು ಏನು ಕಾರಣ ಅಥವಾ ಯಾರು ನಿಮಗೆ ಪ್ರೇರಣೆ?

ನಾನು ತುಂಬಾ ಚಿಕ್ಕವನಾಗಿದ್ದಾಗಲೇ ವಿಜ್ಞಾನದ ಕುರಿತು ಅತ್ಯುತ್ಸುಕನಾಗಿದ್ದೆ. ಶಾಲೆಯಲ್ಲಿದ್ದಾಗಲೇ ಸಿ.ವಿ.ರಾಮನ್ ಅವರನ್ನು ಭೇಟಿ ಮಾಡಿದೆ. ಅವರನ್ನು ಮಾತನಾಡಿಸಿದ್ದೇ ಅಲ್ಲದೆ, 1944-45ರಲ್ಲಿ ಅವರ ಪ್ರಯೋಗಾಲಯಕ್ಕೆ ಭೇಟಿ ಕೊಟ್ಟೆ. ಇದು ನಡೆದದ್ದು ಸುಮಾರು 70 ವರ್ಷಗಳ ಹಿಂದೆ. ಆ ವೇಳೆಗೆ ನಾನು ಹೈಸ್ಕೂಲ್‌ನಲ್ಲಿ ಇದ್ದೆ. ನಾನು ಶಾಲೆಯಲ್ಲಿ ಕಲಿಯಲು ಪ್ರಾರಂಭಿಸಿದ್ದು ತುಂಬಾ ಚಿಕ್ಕ ವಯಸ್ಸಿನಲ್ಲಿ. ಬಿ.ಎಸ್‌ಸಿ. ಮುಗಿಸಿದ ನಂತರ ಸಂಶೋಧನೆ ಮಾಡಬೇಕೆಂದು ನಿರ್ಧರಿಸಿದೆ. ಹಲವು ಜನರ ಹೆಸರುಗಳೊಂದಿಗೆ ಸಂಶೋಧನಾ ಪ್ರಬಂಧಗಳು ಪ್ರಕಟವಾದಾಗಲೆಲ್ಲಾ ನನ್ನಲ್ಲಿ ಒಂದು ರೀತಿ ಬೆರಗು ಮೂಡುತ್ತಿತ್ತು. ಅಂಥದ್ದನ್ನು ನಾನು ಅದಕ್ಕೂ ಮೊದಲು ನೋಡಿಯೇ ಇರಲಿಲ್ಲ. ಎಷ್ಟೋ ಶಿಕ್ಷಕರನ್ನು ಸಂಶೋಧನೆ ಮಾಡುವ ಕುರಿತು ವಿಚಾರಿಸಿದೆ. ಪದವಿಪೂರ್ವ ಹಂತದಲ್ಲಿ ಯಾರೂ ಖುದ್ದು ಸಂಶೋಧನೆ ಮಾಡುವ ಉತ್ಸಾಹ ತೋರಿಸುತ್ತಿರಲಿಲ್ಲ, ಮಾಡುವವರನ್ನು ಉತ್ತೇಜಿಸುತ್ತಲೂ ಇರಲಿಲ್ಲ. ಪದವಿ ಕಲಿಯುವಾಗ ಸಂಶೋಧನೆಯ ಮಾತೆತ್ತಿದರೆ, ‘ನೀನಿನ್ನೂ ಬಿ.ಎಸ್‌ಸಿ ವಿದ್ಯಾರ್ಥಿ’ ಎಂದು ಹೇಳಿ, ಉತ್ಸಾಹಕ್ಕೆ ತಣ್ಣೀರೆರಚುತ್ತಿದ್ದರು.
* ನೀವು ರಸಾಯನ ವಿಜ್ಞಾನ ಆರಿಸಿಕೊಂಡಿದ್ದು ಏಕೆ?
ಪದವಿಗೂ ಮೊದಲು ನಾನು ರಸಾಯನ ವಿಜ್ಞಾನಕ್ಕಿಂತ ಭೌತ ವಿಜ್ಞಾನದ ಕಲಿಕೆಯಲ್ಲಿ ಮುಂದಿದ್ದೆ. ನನಗೆ ಭೌತ–ರಸಾಯನ ವಿಜ್ಞಾನ ಇಷ್ಟವಾಯಿತು ಹಾಗೂ ನಾನು ಅಮೆರಿಕಕ್ಕೆ ಹೋದಾಗ ಆ ವಿಷಯವನ್ನೇ ಆರಿಸಿಕೊಂಡು, ಭೌತ ವಿಜ್ಞಾನವನ್ನು ಮೈನರ್ ಆಗಿಯೂ (ಪೂರಕ ಅಧ್ಯಯನ), ರಸಾಯನ ವಿಜ್ಞಾನವನ್ನೂ ಮೇಜರ್ (ಮುಖ್ಯ ಅಧ್ಯಯನ ವಸ್ತು) ಆಗಿಯೂ ಕಲಿಯತೊಡಗಿದೆ. ಪಾಲಿಂಗ್ ಅವರ ಜೊತೆ ಕೆಲಸ ಮಾಡುವುದು ನನ್ನ ಬಯಕೆಯಾಗಿತ್ತು. ಅವರು ಮಾಲಿಕ್ಯುಲಾರ್ ಸ್ಟ್ರಕ್ಚರ್ ಅಥವಾ ಕಣ ರಚನೆಯ ಕುರಿತು ತಾವು ಏನೂ ಕಲಿಸುತ್ತಿಲ್ಲ ಎಂದರು. ಆದರೆ ಪರ್ಡ್ಯೂನಲ್ಲಿನ ಅವರ ವಿದ್ಯಾರ್ಥಿಗಳಲ್ಲಿ ಒಬ್ಬರು ಇನ್ನೂ ಆ ವಿಷಯದಲ್ಲಿ ಸಂಶೋಧನೆ ಮುಂದುವರಿಸಿದ್ದರು. ಹಾಗಾಗಿ ನಾನು ಪರ್ಡ್ಯೂಗೆ ಹೋಗಲು ತೀರ್ಮಾನಿಸಿದೆ.
* ಅಲ್ಲಿ ನೀವು ಏನಾದರೂ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತೇ?
ಖಂಡಿತ ಸಾಧ್ಯವಾಯಿತು. ನಾನು ಪ್ರಯೋಗಶೀಲ. ಈಗ ಇಲ್ಲಿ ನಾನು ಅತ್ಯುತ್ತಮ ಪ್ರಯೋಗ ಶಾಲೆ ಯನ್ನು ಕಟ್ಟಿದ್ದೇನೆ. ಅಂಥ ಪ್ರಯೋಗಗಳಿಗಾಗಿ ಎಂಐಟಿ ಅಥವಾ ಹಾರ್ವರ್ಡ್‌ಗೆ ಹೋಗುವ ಅಗತ್ಯವಿಲ್ಲ. ಅನಿಲಗಳ ಇಲೆಕ್ಟ್ರಾನ್ ಡಿಫ್ರಾಕ್ಷನ್ (ಇಲೆಕ್ಟ್ರಾನ್ ವಿವರ್ತನೆ) ಕುರಿತು ಪಿಎಚ್.ಡಿ. ಮಾಡುವಾಗ, ಎಕ್ಸ್‌ರೇ ಕ್ರಿಸ್ಟಲೋಗ್ರಫಿ ಮತ್ತಿತರ ವಿಷಯಗಳ ಕುರಿತು ಅಧ್ಯಯನ ಮಾಡುವಾಗ ಪರಿಸ್ಥಿತಿ ಈಗಿನಂತೆ ಇರಲಿಲ್ಲ. ಆಗಿನ ಮೂರು ವರ್ಷ ಸಲೀಸಾಗಿ ಸಾಗಿತು. ಪಿಎಚ್.ಡಿ. ಪದವಿ ದಕ್ಕುವ ಹೊತ್ತಿಗೆ 28ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ನಾನು ಪ್ರಕಟಿಸಿದ್ದೆ. ಅವುಗಳಲ್ಲಿ ಒಂದು ಡಜನ್‌ನಷ್ಟು ಪ್ರಬಂಧಗಳು ಇಲೆಕ್ಟ್ರಾನ್ ಡಿಫ್ರಾಕ್ಷನ್ ಕುರಿತಾಗಿದ್ದವು ಹಾಗೂ ಸ್ಪೆಕ್ಟ್ರೋಸ್ಕಪಿ ಕುರಿತು ಸುಮಾರು ಎಂಟು ಪ್ರಬಂಧಗಳನ್ನು ಸಿದ್ಧಪಡಿಸಿದ್ದೆ.
ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ವಿಶ್ವದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು. 1700ಕ್ಕೂ ಹೆಚ್ಚು ಸಂಶೋಧನೆಗಳ ಪ್ರಕಟಣೆ, 150ಕ್ಕೂ ಹೆಚ್ಚು ಪಿಎಚ್.ಡಿ. ಮಹಾಪ್ರಬಂಧಗಳ ಮಾರ್ಗದರ್ಶಕರು ಅವರು. ವಸ್ತು ವಿಜ್ಞಾನ ಅಥವಾ ಮೆಟೀರಿಯಲ್ ಸೈನ್ಸ್‌ನ ಹಲವು ಕ್ಷೇತ್ರಗಳಲ್ಲಿ ಅವರ ಕೆಲಸ ಪ್ರಧಾನವಾದದ್ದು ಹಾಗೂ ಅವರೀಗ ನ್ಯಾನೊ ವಿಜ್ಞಾನದಲ್ಲಿ ಹೊಸ ಟ್ರೆಂಡ್‌ಗಳನ್ನು ಹುಟ್ಟುಹಾಕಲು ಅವುಡುಗಚ್ಚಿ ಕೆಲಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಸ್ಪೆಕ್ಟ್ರೋಸ್ಕೊಪಿ (ರೋಹಿತಗಳ ಅಧ್ಯಯನ), ಹೈ ಟೆಂಪರೇಚರ್ ಸೂಪರ್ ಕಂಡಕ್ಟಿವಿಟಿ (ಅತ್ಯುಷ್ಣ ವಾಹಕಗಳಿಗೆ ಸಂಬಂಧಿಸಿದ ಅಧ್ಯಯನ), ಕೊಲೊಸಿಯಲ್ ಮ್ಯಾಗ್ನೆಟೊ ರೆಸಿಸ್ಟೆನ್ಸ್ (ಬೃಹತ್ ಅಯಸ್ಕಾಂತೀಯ ತಾಳಿಕೆ), ಗ್ರಾಫೀನ್ಸ್, ಇನಾರ್ಗ್ಯಾನಿಕ್‌ (ನಿರವಯವ) ಸೇರಿದಂತೆ ನ್ಯಾನೊ ನಳಿಕೆಗಳಿಗೆ ಸಂಬಂಧಿಸಿದಂತೆ ಅಸಾಮಾನ್ಯ ಸಾಧನೆ ಮಾಡಿರುವ ಅವರು, ದ್ಯುತಿ ಸಂಶ್ಲೇಷಣೆ ಹಾಗೂ ನೀರಿನ ಕಣಗಳನ್ನು ವಿಭಜಿಸುವ ಹೊಸ ಮಾರ್ಗದ ಸಂಶೋಧನೆಗಳಲ್ಲಿ ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ರಾಜೀವ್ ಗಾಂಧಿ ಹಾಗೂ ಆನಂತರ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ರಾವ್, ಆಗ ವಿಜ್ಞಾನ ಸಂಬಂಧಿ ಅನೇಕ ಯೋಜನೆಗಳು ಪ್ರಾರಂಭವಾಗಲು ಕಾರಣೀಭೂತರಾದವರು. ಬೆಂಗಳೂರಿನ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಆವರಣದಲ್ಲಿ ಪ್ರಧಾನಿಗಳ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದಾಗಿನ ಅನುಭವಗಳ ಬಗೆಗೆ ರಾವ್ ಅವರನ್ನು ಶಿವಾನಂದ ಕಣವಿ ಮಾತನಾಡಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ....
* ಭಾರತಕ್ಕೆ ಮರಳಿ ಬರಲು ನೀವು ತೀರ್ಮಾನಿಸಿದ್ದು ಏಕೆ?
ಓಹ್, ನಾನು ದೇಶಭಕ್ತ ಕುಟುಂಬಕ್ಕೆ ಸೇರಿದವನು. ಬಿಎಸ್.ಸಿವರೆಗೆ ಖಾದಿ ಟೋಪಿ ತೊಡುತ್ತಿದ್ದೆ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. 12–13 ವರ್ಷದವನಿದ್ದಾಗಲೇ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಪ್ರತಿಭಟನಾ ಮೆರವವಣಿಗೆಗಳಲ್ಲಿ ಭಾಗವಹಿಸಿದ್ದೆ. ಸಾರ್ವಜನಿಕ ಭಾಷಣಗಳನ್ನೂ ಮಾಡಿದ್ದೆ. ಆದ್ದರಿಂದ ಭಾರತಕ್ಕೆ ಮರಳಲೇಬೇಕು ಎಂಬ ಸಂಕಲ್ಪ ಮನಸ್ಸಿನಲ್ಲಿ ಸಹಜವಾಗಿಯೇ ಇತ್ತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸೇರಿ, ನಾಲ್ಕು ವರ್ಷ ಕೆಲಸ ಮಾಡಿದೆ. ಆರು ಪಿಎಚ್.ಡಿ.ಗಳಿಗೆ ಮಾರ್ಗದರ್ಶನ ಮಾಡಿದೆ.
* ಇದುವರೆಗೆ ನೀವು ಎಷ್ಟು ಪಿಎಚ್.ಡಿಗಳಿಗೆ ಮಾರ್ಗದರ್ಶನ ಮಾಡಿದ್ದೀರಿ? ಐಐಎಸ್‌ಸಿಯಲ್ಲಿ ನೀವು ಮಾಡಿದ್ದೇನು?
150ಕ್ಕೂ ಹೆಚ್ಚು ಪಿಎಚ್.ಡಿ.ಗಳಿಗೆ ಮಾರ್ಗ ದರ್ಶನ ಮಾಡಿದ್ದೇನೆ. ‘ಅಲ್ಟ್ರಾ ವಯೊಲೆಟ್ ಅಂಡ್ ವಿಸಿಬಲ್ ಸ್ಪ್ರೆಕ್ಟ್ರೊಸ್ಕೊಪಿ ಫಾರ್ ಕೆಮಿಸ್ಟ್ರಿ’ ಪುಸ್ತಕ ಬರೆದಾಗ ನನಗಿನ್ನೂ 26 ವರ್ಷವಾಗಿತ್ತು. ಆ ಪುಸ್ತಕ ಏಳು ಭಾಷೆಗಳಿಗೆ ಅನುವಾದ ಗೊಂಡಿತು. ಇವೆಲ್ಲವೂ ಸೇರಿ ನನ್ನನ್ನು ಐಐಟಿ, ಕಾನ್ಪುರದ ಪ್ರೊಫೆಸರ್ ಮಾಡಿದರು. ಆಗ ನನಗೆ 30 ವರ್ಷ ಕೂಡ ಆಗಿರಲಿಲ್ಲ.
ಮೇಘನಾದ್‌ ಸಹಾ ಹಾಗೂ ಎಸ್.ಎನ್. ಬೋಸ್ ಸೇರಿದಂತೆ ಭಾರತೀಯ ವಿಜ್ಞಾನದ ಶ್ರೇಷ್ಠನಾಮರೆಲ್ಲಾ ಯುವಕರಾಗಿದ್ದಾಗಲೇ ಪ್ರಾಯೋಗಿಕ ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟರು. ಕೊನೆಯವರೆಗೂ ವಿಜ್ಞಾನದಲ್ಲಿ ಪ್ರಾಯೋಗಿಕ ಕೆಲಸಗಳಿಗೆ ಒತ್ತು ನೀಡಿದವರೆಂದರೆ ಜಗದೀಶ್ ಚಂದ್ರ ಬೋಸ್ ಹಾಗೂ ಸಿ.ವಿ. ರಾಮನ್. ನನಗೆ ಅಂಥವರನ್ನು ಕಂಡರೆ ಆರಾಧ್ಯ ಭಾವನೆ ಇದೆಯೇ ಹೊರತು ಒಂದೇ ಒಂದು ಮಹತ್ ಕಾರ್ಯ ಮಾಡಿ ಸುಮ್ಮನಾಗುವವರ ಕುರಿತು ಅಲ್ಲ.
* ಐಐಟಿ, ಕಾನ್ಪುರ ಹೇಗಿತ್ತು?
ಐಐಟಿ, ಕಾನ್ಪುರ ತುಂಬಾ ಚೆನ್ನಾಗಿತ್ತು. ಭಾರತದಲ್ಲಿಯೇ ಅತ್ಯುತ್ತಮ ರಾಸಾಯನಿಕ ವಿಜ್ಞಾನ ವಿಭಾಗ ಇದ್ದುದು ಅಲ್ಲಿಯೇ. 1976ರಲ್ಲಿ ನಾನು ಐಐಟಿ ಬಿಟ್ಟೆ. ಅಲ್ಲಿ ನಾನು ಕೆಲಸ ಮಾಡುತ್ತಿದ್ದ ಮಟ್ಟ ನೋಡಿ, ಮಹತ್ತರವಾದ ಏನನ್ನೂ ನನ್ನಿಂದ ಮಾಡಲಾಗುವುದಿಲ್ಲ ಎಂದು ನನಗೇ ಅರಿವಾಯಿತು. ಆಮೇಲೆ ಸತೀಶ್ ಧವನ್ ನನಗೆ ಹೇಳಿದರು: ‘ನೀನು ಭಾರತವನ್ನು ಯಾಕೆ ಬಿಡುತ್ತೀಯಾ? ಬೆಂಗಳೂರಿನ ಐಐಎಸ್‌ಸಿಗೆ ವಾಪಸ್ಸಾಗಿ, ಸೊನ್ನೆಯಿಂದಲೇ ಪ್ರಾರಂಭಿಸಿ ಅಲ್ಲಿ ಒಂದು ಹೊಸ ರಾಸಾಯನಿಕ ವಿಜ್ಞಾನ ವಿಭಾಗವನ್ನು ಕಟ್ಟು. ನನಗೆ ಹಣಕಾಸಿನ ನೆರವು ನೀಡುವುದಂತೂ ಸಾಧ್ಯವಿಲ್ಲ. ನೀನೇ ಅದನ್ನು ಹೊಂದಿಸಿ ತರಬೇಕು. ಆದರೆ, ಅಲ್ಲಿ ನಿನಗೆ ಏನು ಬೇಕೋ ಅದನ್ನು ಮಾಡುವ ಸ್ವಾತಂತ್ರ್ಯ ಕೊಡಬಲ್ಲೆ’.
ನಾನು ಐಐಎಸ್‌ಸಿಯಲ್ಲಿ ಹೊಸ, ಸುಸಜ್ಜಿತ ಸಾಲಿಡ್‌ ಸ್ಟೇಟ್ ಕೆಮಿಸ್ಟ್ರಿ, ಸ್ಟ್ರಕ್ಚರಲ್ ಕೆಮಿಸ್ಟ್ರಿ ಹಾಗೂ ವಸ್ತು ವಿಜ್ಞಾನ ಸಂಶೋಧನಾ ವಿಭಾಗವನ್ನು ಕಟ್ಟಿದೆ. ಈ ಕೇಂದ್ರವನ್ನು ಕಟ್ಟುವ ಅವಕಾಶ ಜೆಎನ್‌ಸಿಎಎಸ್‌ಆರ್‌ನಲ್ಲಿಯೂ ನನಗೆ ಒದಗಿಬಂದಿತ್ತು. ಈಗ ಅದು ಕೂಡ ಅದ್ಭುತ ಕೇಂದ್ರವಾಗಿದೆ. ಇವತ್ತು ಯುವಜನತೆ ಭಾರತದಲ್ಲಿ ಸೌಕರ್ಯಗಳಿಲ್ಲ ಎಂದು ದೂರುವ ಹಾಗಿಲ್ಲ. ಏಕೆಂದರೆ, ನಮ್ಮಲ್ಲಿ ವಿಶ್ವ ದರ್ಜೆಯ ವಸ್ತು ವಿಜ್ಞಾನ ಸಂಶೋಧನಾ ಕೇಂದ್ರಗಳಿವೆ.
ನಾವು ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿದೆವು. ಉದಾಹರಣೆಗೆ, ವಿಜ್ಞಾನದಲ್ಲಿ ನಾನು ಏನು ಅಂದುಕೊಂಡಿದ್ದೆನೋ ಅದನ್ನು ಮಾಡಲು ಎಮಿರೇಟ್ಸ್‌ನ ಶೇಕ್ ನಮಗೆ 15 ಕೋಟಿ ರೂಪಾಯಿ ಹಣಕಾಸಿನ ನೆರವು ಕೊಟ್ಟರು! ದುರದೃಷ್ಟವಶಾತ್ ಯಾವ ಭಾರತೀಯರೂ ಅಷ್ಟು ಉದಾರವಾಗಿ ನೆರವು ನೀಡಲಿಲ್ಲ.
* ಒಬ್ಬ ಸಾಮಾನ್ಯ ವ್ಯಕ್ತಿಗೆ ನೀವು ಮಾಡುವ ಕೆಲಸ ಏನೆಂದು ಹೇಗೆ ವಿವರಿಸುತ್ತೀರಿ?
ನಾನು ಹೊಸತನದ ವಸ್ತುಗಳನ್ನು ಸೃಷ್ಟಿಸುತ್ತೇನೆ ಅಥವಾ ಹೊಸ ಗುಣಲಕ್ಷಣಗಳಿರುವ ವಸ್ತುಗಳನ್ನು ಸಿದ್ಧಪಡಿಸುತ್ತೇನೆ. ಉದಾಹರಣೆಗೆ ಗ್ರಾಫೀನ್. ಮಾಲಿಬ್ಡೆನಮ್ ಸಲ್ಫೈಡ್‌ನ ದಪ್ಪ ಶೀಟ್‌ಗಳ ಒಂದು ಮಾಲಿಕ್ಯೂಲ್‌ನ ವ್ಯಾಪ್ತಿ ಇತ್ಯಾದಿ. ಈ ಕುರಿತು ಪ್ರಮುಖ ಲೇಖನ ಬರೆದುಕೊಡುವಂತೆ ನನ್ನನ್ನು ಕೇಳಿದ್ದಾರೆ.
* ಅವು ಆಸಕ್ತಿಕರ ಏಕೆ?
ಅವಕ್ಕೆ ಎಲ್ಲಾ ರೀತಿಯ ಹೊಸ ಅಯಸ್ಕಾಂತೀಯ ಮತ್ತು ಎಲೆಕ್ಟ್ರಾನಿಕ್‌ ಗುಣಗಳಿವೆ ಹಾಗೂ ಅವುಗಳ ವಿಷಯಾಸಕ್ತಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ಬಗೆಗೆ ಉಪನ್ಯಾಸ ನೀಡಲು ನಾನು ಜಪಾನ್‌ಗೆ ಹೋಗುತ್ತಿದ್ದೇನೆ.
* ಇತ್ತೀಚೆಗೆ ನಿಮಗೆ ದ್ಯುತಿ ಸಂಶ್ಲೇಷಣೆಯಲ್ಲಿ ಆಸಕ್ತಿ ಮೂಡಿತು ಎಂದು ಕೇಳಿದೆ.
ಹೌದು. ಇತ್ತೀಚೆಗೆ ನಮ್ಮಲ್ಲಿ ಅನೇಕ ಹುಡುಗ, ಹುಡುಗಿಯರು ನೀರಿನ ಕಣಗಳನ್ನು ಬೇರ್ಪಡಿಸಿ, ಜಲಜನಕ ಹಾಗೂ ಆಮ್ಲಜನಕವನ್ನು ತಯಾರಿಸುತ್ತಿದ್ದಾರೆ. ಜಲಜನಕ ಮಾಡುವ ಅತ್ಯುತ್ತಮ ಮಾರ್ಗವಿದು.
* ಪ್ರಧಾನಿಗಳ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿ ನಿಮ್ಮ ಅನುಭವಗಳೇನು?
ನನಗೆ ಅವರು ಯಾವುದಕ್ಕೂ ಇಲ್ಲ ಎನ್ನದೇ ಇದ್ದುದರಿಂದ ಒಳ್ಳೆಯ ಅನುಭವಗಳೇ ಆದವು. ನಾವು ಅನೇಕ ಕೆಲಸಗಳನ್ನು ಮಾಡಿದ್ದೇವಾದರೂ ಮನಮೋಹನ್ ಸಿಂಗ್ ಅವರಿಗೆ ಅವುಗಳ ಕುರಿತು ಮಾತನಾಡುವಷ್ಟು ಸಾಮರ್ಥ್ಯವಿಲ್ಲ. ನಾನು ರಾಜಕಾರಣಿಯಲ್ಲ. ಅಂಥ ಭಾಷಣಗಳನ್ನು ಮಾಡುವುದು ನನ್ನಿಂದಲೂ ಸಾಧ್ಯವಿಲ್ಲ. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಒಳ್ಳೆಯ ಕೆಲಸಗಳು ಆಗಿವೆ. ಐದು ಐಐಎಸ್‌ಇಆರ್‌ (ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೆಷನ್‌ ಅಂಡ್ ರಿಸರ್ಚ್‌)ಗಳನ್ನು ಪ್ರಾರಂಭಿಸಿದೆವು, ಫಾಸ್ಟ್ ಬ್ರೀಡರ್ ರಿಯಾಕ್ಟರ್ ಆನ್‌ಲೈನ್‌ಗೆ ಹೋಗಿದ್ದು ಅಥವಾ ಹೊಸ ರಾಕೆಟ್‌ಗಳು ಕ್ರಯೋಜಿನಿಕ್ ಎಂಜಿನ್‌ನಂತೆ ಮೇಲೆ ಹಾರಿದ್ದು ಹೇಗೆ ಅಂದುಕೊಂಡಿರಿ? ಹೊಸ ಪೆಟಾ ಫ್ಲಾಪ್ ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸಲು ನಮಗೆ 5000 ಕೋಟಿ ರೂಪಾಯಿ ಹಣಕಾಸಿನ ನೆರವು ಸಿಕ್ಕಿತ್ತು. ಇದುವರೆಗೆ ಯಾವ ದೇಶವೂ ಇದನ್ನು ಅಭಿವೃದ್ಧಿ ಪಡಿಸಿಲ್ಲ. ಚುನಾವಣೆಗಳು ಸನ್ನಿವೇಶವನ್ನು ಮಂಕಾಗಿಸಿದವು. ಯಾರಿಗೂ ಯಾವುದೇ ಧನಾತ್ಮಕ ಸಂಗತಿ ಕೇಳುವುದು ಬೇಡವಾಯಿತು. ಪುಣೆಯ ಐಐಎಸ್‌ಇಆರ್ ಅನ್ನೇ ನೋಡಿ. ಅಲ್ಲಿ ಪದವಿಪೂರ್ವ ವಿಜ್ಞಾನ ಶಿಕ್ಷಣದಿಂದಲೇ ನಾವು ಮಹತ್ತರವಾದುದನ್ನು ಸಾಧಿಸಲು ಸಾಧ್ಯವಿದೆ. ಕೆಲವರು ಹಳೆಯ ಸರ್ಕಾರದ ಜೊತೆ ಯಾವುದೇ ಕೆಲಸ ಮಾಡಿರುವವರನ್ನು ಕಾಂಗ್ರೆಸ್‌ನವರು ಎಂದು ಕರೆಯಬಹುದು. ಆದರೆ ನಾನು ರಾಜಕೀಯ ವ್ಯಕ್ತಿಯಲ್ಲ. ನಾನು ಹೊಸ ಪ್ರಧಾನಿಯನ್ನೂ ಅರ್ಧ ಗಂಟೆ ಭೇಟಿ ಮಾಡಿದೆ. ಅದು ಒಳ್ಳೆಯ ಅನುಭವ. ದೇಶದ ವಿಜ್ಞಾನದ ಸ್ಥಿತಿಗತಿಯ ಕುರಿತು ಬರೆದು ಕೊಡುವಂತೆ ನನ್ನನ್ನು ಕೇಳಿದರು. ಅದನ್ನು ಬರೆದುಕೊಟ್ಟ ಮೇಲೆ ‘ಧನ್ಯವಾದ’ ಎಂಬ ಪ್ರತಿಕ್ರಿಯೆ ಸಿಕ್ಕಿತು, ಅಷ್ಟೆ.
* ನೀವು ರಾಜ್ಯಸಭಾ ಸದಸ್ಯ ಆಗಲಿಲ್ಲವೇಕೆ?
ಸರ್ಕಾರದಲ್ಲಿ ಕೆಲಸ ಮಾಡಬೇಕು ಎಂದು ನಾನು ಎಂದೂ ಬಯಸಿದವನಲ್ಲ. ಕಾರ್ಯದರ್ಶಿ ಅಥವಾ ರಾಜ್ಯಸಭಾ ಎಂಪಿ ಅಥವಾ ಸಚಿವ ಆಗುವುದು ನನ್ನ ಆಸೆಯಲ್ಲ. ಮೂರು ಸಲ ರಾಜ್ಯಸಭೆಯ ಸ್ಥಾನವನ್ನು ನೀಡಲು ಮುಂದೆಬಂದರು. ನಾನು ನಿರಾಕರಿಸಿದೆ. 1975ರಲ್ಲಿ ಐಐಟಿ, ಕಾನ್ಪುರದಲ್ಲಿ ಇದ್ದಾಗಲೇ ಇಂದಿರಾಗಾಂಧಿ ಅವರು ಕಾರ್ಯದರ್ಶಿ ಸ್ಥಾನ ನೀಡಲು ಮುಂದೆ ಬಂದರು. ಆಗಲೂ ನಾನು ಬೇಡ ಎಂದಿದ್ದೆ. ಅದನ್ನು ಕೇಳಿ ಅವರಿಗೆ ಆಶ್ಚರ್ಯವಾಗಿತ್ತು. ‘ನಾನಿನ್ನೂ ಯುವಕನಾಗಿದ್ದು, ವಿಜ್ಞಾನದಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಬೇಕೆಂದಿದ್ದೇನೆ, ಕಾರ್ಯದರ್ಶಿ ಆಗಲು ಇಷ್ಟವಿಲ್ಲ’ ಎಂದಿದ್ದೆ. ಆನಂತರವೂ ಅವರು ನನ್ನ ಬಗೆಗೆ ಉತ್ತಮ ಭಾವನೆಯನ್ನೇ ಹೊಂದಿದ್ದರು ಹಾಗೂ ಪದ್ಮಭೂಷಣ ಪ್ರಶಸ್ತಿಗೆ ನನ್ನ ಹೆಸರನ್ನು ಸೂಚಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ರೋಚಕತೆಯನ್ನು ಅನುಭವಿಸುವುದರಲ್ಲಿ ರಾಜೀವ್ ಗಾಂಧಿ ಅವರನ್ನು ಮೀರಿಸುವವರು ಯಾರೂ ಇಲ್ಲ. ನಾವಿಬ್ಬರು ಒಟ್ಟಿಗೆ ಅನೇಕ ಕೆಲಸಗಳನ್ನು ಮಾಡಿದ್ದೇವೆ.
* ವಿ.ಪಿ. ಸಿಂಗ್, ಪಿ.ವಿ. ನರಸಿಂಹ ರಾವ್ ಅಥವಾ ವಾಜಪೇಯಿ ಅವರ ಜೊತೆಗಿನ ಅನುಭವಗಳು ಹೇಗಿದ್ದವು?
ಅವರೆಲ್ಲಾ ಪ್ರಧಾನಿಗಳಾಗಿದ್ದಾಗ ವೈಜ್ಞಾನಿಕ ಸಲಹಾ ಸಮಿತಿ ಇರಲೇ ಇಲ್ಲ. ಪಿ.ವಿ. ನರಸಿಂಹ ರಾವ್ ಅವರ ಕಾಲಘಟ್ಟ ತೀರಾ ಕೆಟ್ಟದಾಗಿತ್ತು. ಮನಮೋಹನ್ ಸಿಂಗ್ ಅವರ ಕಾಲದಲ್ಲೂ ನಾವು ಅನೇಕ ಕೆಲಸಗಳನ್ನು ಮಾಡಿದೆವು. ಆರು ವಾರಗಳಿಗೊಮ್ಮೆ ನಾವು ಅವರನ್ನು ಭೇಟಿ ಮಾಡುತ್ತಿದ್ದೆವು. ಆಗ ಅವರು, ‘ಪ್ರೊಫೆಸರ್ ರಾವ್, ನನ್ನ ಅನುಮತಿ ಸಿಕ್ಕಿದೆ ಎಂದುಕೊಂಡು ನೀವು ನಿಮ್ಮ ಕೆಲಸ ಮುಂದುವರಿಸಿ’ ಎನ್ನುತ್ತಿದ್ದರು. ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಂಬುತ್ತಿದ್ದರು. ನಂಬಿಕೆ ಇಲ್ಲದ ಮಂತ್ರಿಗಳ ಜೊತೆ ಹೆಣಗಾಡುವುದು ಕಷ್ಟ. ‘ಸಚಿವರ ಜೊತೆ ಮುಖ್ಯೋಪಾಧ್ಯಾಯರ ರೀತಿ ನಡೆದುಕೊಳ್ಳಬೇಕು’ ಎಂದು ರಾಜೀವ್ ಗಾಂಧಿ ಆಗಾಗ ಹೇಳುತ್ತಿದ್ದರು. ಅವರ ಮಾತು ಸತ್ಯ. ಡಾ. ಸಿಂಗ್ ಸಂಕೋಚ ಸ್ವಭಾವದ ಸಜ್ಜನ. ಅದು ಅವರ ದೌರ್ಬಲ್ಯವೂ ಆಗಿತ್ತು. ರಾಜಕೀಯದಲ್ಲಿದ್ದುಕೊಂಡೂ ಹಾಗಿರುವುದು ಸರಿಯಲ್ಲವೇನೋ? ರಾಜೀವ್ ಗಾಂಧಿ ಅವರಿಗೆ ಆಸಕ್ತಿ ಇತ್ತು, ನಿರ್ಣಯಗಳನ್ನು ಕೈಗೊಳ್ಳುವುದರಲ್ಲೂ ಮುಂದಿದ್ದರು. ಅವರು ಮತ್ತಷ್ಟು ಅವಧಿಗೆ ಮುಂದುವರಿದಿದ್ದಿದ್ದರೆ ಇನ್ನಷ್ಟು ಕೆಲಸಗಳು ಆಗುತ್ತಿದ್ದವೇನೊ...
* ಈಗ ನಿಮ್ಮ ವೈಜ್ಞಾನಿಕ ಆಸಕ್ತಿಗಳೇನು?
ಕೃತಕ ದ್ಯುತಿ ಸಂಶ್ಲೇಷಣೆ, ನ್ಯಾನೊ ಶೀಟ್‌ಗಳು, ನಿರವಯವ ನ್ಯಾನೊ ಶೀಟ್‌ಗಳ ಹೊಸ ಭೌತ ವಿಜ್ಞಾನ ಇವೆಲ್ಲವೂ ಅಚ್ಚರಿ ಹುಟ್ಟಿಸುವಂತಿವೆ. ಇವತ್ತಷ್ಟೇ ನಾನು ಒಂದು ಪಿಎಚ್.ಡಿ ಕುರಿತು ಕೇಳಿಬಂದೆ. ಡಾ. ವಾಘ್‌ಮಾರೆ ಎಂಬ ಅದ್ಭುತ ಸಂಶೋಧನಾ ವ್ಯಕ್ತಿ ಅಲ್ಲಿದ್ದರು. ಅವರ ವಿದ್ಯಾರ್ಥಿ ಅನೇಕ ಮಹತ್ವದ ಲೆಕ್ಕಾಚಾರಗಳನ್ನು ಮಂಡಿಸಿದ್ದರು. ವಿಜ್ಞಾನ ಮುಂದುವರಿಯುವುದೇ ಹೀಗೆ. 80ರ ವಯಸ್ಸಿನಲ್ಲೂ ಹೀಗೆ ಸಾಗುತ್ತಲೇ ಇದೆ.
ಸಂದರ್ಶಕ ಶಿವಾನಂದ ಕಣವಿ ಥಿಯರಿಟಿಕಲ್ ಫಿಸಿಸಿಸ್ಟ್ ಹಾಗೂ ಬಿಸಿನೆಸ್ ಪತ್ರಕರ್ತ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಉಪಾಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು. ‘ಸ್ಯಾಂಡ್ ಟು ಸಿಲಿಕಾನ್’ ಹಾಗೂ ‘ರಿಸರ್ಚ್ ಬೈ ಡಿಸೈನ್: ಇನೊವೇಷನ್ ಅಂಡ್ ಟಿಸಿಎಸ್’ ಎಂಬ ಕೃತಿಗಳನ್ನೂ ಬರೆದಿದ್ದಾರೆ. ಅವರ ಇ-ಮೇಲ್: skanavi@gmail.com, ಬ್ಲಾಗ್: www.reflections-shivanand.blogspot.com/